✍️ಅಶ್ವಿನಿ ಹೆಬ್ಬಾರ್
ಬಾಲ್ಯವೆಂಬ ಸುಂದರ ಪ್ರಪಂಚ ...
ಮರಳಿ ಪಡೆಯಲಾಗದ ಅಮೂಲ್ಯ ಕ್ಷಣಗಳ ಗೊಂಚಲುಗಳು ನನ್ನ ನೆನಪಿನ ಬುತ್ತಿಯಲ್ಲಿ ಭದ್ರ ಸ್ಥಾನ ಪಡೆದು ಬಿಟ್ಟಿದೆ. ನಾ ಮಾಡುತ್ತಿದ್ದ ಅವಾಂತರಗಳು,ತಿನ್ನುತ್ತಿದ್ದ ಬಿಸಿ ಬಿಸಿ ಕಜ್ಜಾಯ, ತರಗತಿಯಿಂದ ಮನೆಗೆ ಬಂದ ಮೇಲೂ ಬೆನ್ನಿಗೆ ಬೀಳುತ್ತಿದ್ದ ಬಾಸುಂಡೆ ಮರೆಯಲಾಸಾಧ್ಯ ಕ್ಷಣಗಳವು!!!
ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಹಾಸಿಗೆಯಿಂದ ಏಳಲು ಕಳ್ಳತನ ಮಾಡಿ, ಶಾಲೆಗೆ ಹೋಗಲು ಕುಂಟು ನೆಪಗಳನ್ನು ಹೂಡಿದರು ಕೂಡ ಪ್ರಯೋಜನವಾಗದೆ ಇದ್ದಾಗ ಮಾಡುತ್ತಿದ್ದ ನಾಟಕಗಳು ಅಷ್ಟಿಷ್ಟಲ್ಲ. ಈಗ ಆ ಹಳೆಯ ನೆನಪುಗಳ ಮೆಲುಕು ಹಾಕಿದರೆ ಸುಂದರ ನಗುವೊಂದು ಅರಿವಿಲ್ಲದೆ ಸುಳಿದಾಡುತ್ತದೆ.
ಮಳೆಯಲ್ಲಿ ನೆನೆದು ಒದ್ದೆಯಾಗಿ, ಜ್ವರ ಬರಿಸಿಕೊಂಡು ಮನೆಯಲ್ಲಿ ಬೈಗುಳ ತಿನ್ನುತ್ತಿದ್ದ ಮಜವೇ ಬೇರೆ!!.. ಅದರಲ್ಲೂ ಬಾಲ್ಯದ ದಿನಗಳು, ಬಾಲ್ಯದ ಆಟಗಳು, ಸ್ನೇಹಿತರೊಂದಿಗೆ ಕಳೆದ ಪ್ರತಿ ಕ್ಷಣಗಳು ಎಷ್ಟೇ ವರ್ಷಗಳು ಕಳೆದರೂ ಎಂದಿಗೂ ಮಾಸದೆ ಇರುವಂತಹ ನವೀನ ಅನುಭೂತಿ.
ಪಟ್ಟಣದಿಂದ ಕೊಂಚ ಒಳಗೆ ಇದ್ದ ನನ್ನ ಶಾಲೆ ಶಿಸ್ತಿನ ವಿಷಯದಲ್ಲಿ ರಾಜಿಯಾಗದೆ ,ನಿಯಮಗಳನ್ನು ಪಾಲಿಸದೇ ಇದ್ದರೆ ಶಿಕ್ಷೆ ಖಚಿತವಾಗಿತ್ತು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಶಿಕ್ಷಕ ವೃಂದ, ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೆಲವೊಮ್ಮೆ ಬಾಲ್ಯದ ಉತ್ಸಾಹದಿಂದಲೋ ಇಲ್ಲವೇ ಶಿಕ್ಷಕರ ಒತ್ತಾಯಕ್ಕೋ ಮಣಿದು ಭಾಗವಹಿಸಿ ಪ್ರಶಸ್ತಿ ಪಡೆದರೆ ಮುಗಿಯಿತು ಏನೋ ಸಾಧಿಸಿದ ಸಂಭ್ರಮ.
ಸುಂದರ ಶಾಲೆಯ ವಾತಾವರಣವೆ ಒಂದು ರೀತಿಯ ಹಿತ. ಒಂದು ಕ್ಲಾಸ್ ಮುಗಿದ ಕೂಡಲೇ ಆಗುವ ಬೆಲ್ ಖುಷಿ ತರಿಸಿದರೆ, ಅದೇ ಆ ಕ್ಲಾಸ್ ಅಥವಾ ಟೀಚರ್ ಇಷ್ಟವಿಲ್ಲದೆ ಹೋದರೆ ಯಾವಾಗ ಕ್ಲಾಸ್ ಮುಗಿಯುತ್ತದೊ ಎಂದು ಕಾದು ಕೂರುವ ಜಾಯಮಾನ ಜೊತೆಗೆ ಆಟದ ಸಮಯವಾದರೆ ಮನಸ್ಸು ಆಕಾಶದಲ್ಲಿಯೆ ತೇಲುತ್ತಿತ್ತು. ನಾನಾ ಆಟ ಆಡುತ್ತಾ ಆಗ ಬೆಲ್ ಆದರೆ ಕೋಪ, ಬೇಸರ ಜೊತೆಗೆ ಆಟದ ವಿಚಾರದಲ್ಲಿ ನಾವು ಸೋತರೆ ಕಿತ್ತಾಡಿ ಮುನಿಸಿಕೊಳ್ಳುತ್ತಿದ್ದ ದಿನಗಳವು. ಶಾಲೆಯಲ್ಲಿ ಪರೀಕ್ಷೆ ಎಂಬ ವಿಚಾರ ಬಂದಾಗ ಮಾತ್ರ ಬೇಸರವಾಗುತ್ತಿತ್ತು. ಶಾಲೆಯಲ್ಲಿಯೂ ಪರೀಕ್ಷೆ ಸರಿ ಮಾಡದಿದ್ದರೆ ಬೈಗುಳ ಹೊಡೆತ ಸಿಗುತ್ತಿತ್ತು.
ಇದು ಪರೀಕ್ಷೆಯ ಮೊದಲಿನ ಕಥೆಯಾದರೆ, ನಿಜವಾದ ಕಠಿಣ ವಾದ ಕೆಲ್ಸವಿರುತ್ತಿದ್ದದ್ದೇ ಪರೀಕ್ಷೆಯ ಬಳಿಕ ಅಕಸ್ಮಾತ್ ಒಳ್ಳೆಯ ಅಂಕ ಬಂದರೆ ಪರವಾಗಿಲ್ಲ.. ಬಚಾವ್.. ದುರದೃಷ್ಟ ವಶಾತ್ ಕಮ್ಮಿ ಬಂದರೆ ಬೈಗುಳ ಹೊಡೆತ ಎಲ್ಲ ಮಾಮೂಲಿ..ಅದಕ್ಕಾಗಿಯೇ ಮಾರ್ಕ್ಸ್ ಕಾರ್ಡ್ ಸಿಕ್ಕ ಕೂಡಲೇ ಮನೆಯಲ್ಲಿ ತೋರಿಸದೆ ಶಾಲೆಗೆ ಹೊರಟು ಇನ್ನೇನು ವ್ಯಾನ್ ಬರಲು ಎರಡು ಸೆಕೆಂಡ್ ಬಾಕಿ ಇದೆ ಎಂದಾಗ ಸೈನ್ ಹಾಕಿಸಿಕೊಂಡು ಅಳುವ ನಾಟಕದ ಪ್ರಹಸನ ಕೂಡ ನಡೆಯುತ್ತಿತ್ತು.
ಅದರಲ್ಲೂ ಕೂಡ ಶಾಲೆಯ ವಾರ್ಷಿಕೋತ್ಸವ ಇಲ್ಲವೆ ಕ್ರಿಸ್ಮಸ್ ಬಂದರೆ ಮಾತ್ರ ಕಲರ್ ಡ್ರೆಸ್ ಹಾಕಲು ಅವಕಾಶ ದೊರೆಯುತ್ತಿತ್ತು. ಆಗಂತೂ ನಮಗೆ ಹಬ್ಬವೇ ಸರಿ!! ಬಣ್ಣ ಬಣ್ಣದ ಬಟ್ಟೆಗೆ ಮ್ಯಾಚಿಂಗ್ ಕ್ಲಿಪ್, ಸ್ಲಿಪ್ಪರ್ ಎಲ್ಲ ಹಾಕಿಕೊಂಡು ಹೋಗುವ ಸಂಭ್ರಮವೇ ಬೇರೆ..
ಶಾಲೆಯ ಪಕ್ಕದಲ್ಲಿರುವ ಗೂಡಂಗಡಿಗೆ ಹೋಗಿ ಎರಡು ರುಪಾಯಿ ಇಲ್ಲವೇ 50ಪೈಸೆಗೆ ಸಿಗುತ್ತಿದ್ದ ಹುಣಸೆ ಮಿಠಾಯಿ,2 ರೂಪಾಯಿಗೆಲ್ಲ ನಮ್ಮ ಕೈತುಂಬಾ ಸಿಗುತ್ತಿದ್ದ ಬಣ್ಣ ಬಣ್ಣದ ಚಾಕಲೇಟುಗಳ ತಂದು ತರಗತಿಯವರೆಗೆ ಹಂಚಿ ತಿನ್ನುವ, ನೆಲ್ಲಿಕಾಯಿ,ಪೆಪ್ಪರ್ ಮೇಂಟ್ ಕ್ಲಾಸ್ ಆಗುವಾಗ ತಿಂದು ಶಿಕ್ಷಕರ ಕೈಯಲ್ಲಿ ಸಿಕ್ಕಿ ಬಿದ್ದು ಪೇಚಿಗೆ ಸಿಲುಕಿದ ದಿನಗಳು ಕೂಡ ಇವೆ. ಆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಕುಚೇಶ್ಟೆಗಳ ನೆನೆದರೆ ಇಂದಿಗೂ ನಗು ಬರುತ್ತದೆ. ಬಹುಶಃ ನನ್ನ ಜೀವನದಲ್ಲಿ ಕಂಡ ಅಮೂಲ್ಯ ಸಂಪತ್ತು ಎಂದೇನಾದರೂ ಇದ್ದರೆ ಅದು ನನ್ನ ಬಾಲ್ಯದ ದಿನಗಳು ಜೊತೆಗೆ ಬಾಲ್ಯದ ಸ್ನೇಹಿತರು. ಪುತ್ತೂರಿನಲ್ಲಿ ಕಾಲೇಜು ಮೆಟ್ಟಿಲು ಹತ್ತಿ ಪದವಿ ಮುಗಿಸಿದ ಬಳಿಕವೂ ನನ್ನ ಬಾಲ್ಯದ ಸ್ನೇಹಿತರ ನೆನಪು ಬಹುವಾಗಿ ಕಾಡುತ್ತಿತ್ತು. 13 ವರ್ಷಗಳ ಬಳಿಕ ಬಾಲ್ಯದ ಸ್ನೇಹಿತ ರೆಲ್ಲರನ್ನೂ ಒಗ್ಗೂಡಿಸಿ ವಾಟ್ಸಪ್ ಗ್ರೂಪ್ ಮಾಡಿ, ಬಾಲ್ಯದ ಸ್ನೇಹಿತರನ್ನು ಭೇಟಿಯಾದ ಕ್ಷಣಗಳು ಬಾಲ್ಯದ ತುಂಟಾಟದ ದಿನಗಳನ್ನು ನೆನಪಿಸಿದ್ದಂತು ಸುಳ್ಳಲ್ಲ.. ಆದರೂ ಕೂಡ ಇವೆಲ್ಲ ಅಚ್ಚಳಿಯದೆ ನನ್ನ ಮನದಾಳದಲ್ಲಿ ಉಳಿಯುವ ಸವಿನೆನಪುಗಳು ...
ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲು ಶಿಕ್ಷಕರ ಪಾತ್ರ ಮಹತ್ವವಾದದ್ದು, ಅವರಿಗೊಂದು ಕೃತಜ್ಞತೆ ಸಲ್ಲಿಸಲೇಬೇಕು. ಏನೇ ಆದರೂ ಕೂಡ ನನ್ನ ಬಾಲ್ಯದ ದಿನಗಳು ಎಂದಿಗೂ ಮರೆಯಲಾಗದ ಸುಂದರ ಅನುಭವಗಳ ಸರಮಾಲೆಯೆ ಸರಿ...